Tuesday 3 November 2015

ಅಜ್ಞಾನದ ಪರದೆಯ ಹಿಂದಿನ ಗೊಂದಲಗಳು

ಬಹಳಷ್ಟು ಸಲ ಸಮಾಜದ ರೀತಿ-ನೀತಿಗಳಿಂದ ನಾವು ಗೊಂದಲಕ್ಕೆ ಒಳಗಾಗುತ್ತೇವೆ. ದುಷ್ಟರು,ಬ್ರಷ್ಟರು ಐಶಾರಾಮಿ ಸುಖೀ ಜೀವನ ನಡೆಸುತ್ತಿದ್ದರೆ,ಯಾವುದೇ ಆಪತ್ತು ಎದುರಾದರೂ ಲೀಲಾಜಾಲವಾಗಿ ಅದರಿಂದ ಪಾರಾಗುತ್ತಿದ್ದರೆ, ಸಂತರು,ಸಾತ್ವಿಕರು ಜಗತ್ತಿನ ಎಲ್ಲಾ ದುಃಖ,ಕಷ್ಟಕೋಟಲೆಗಳಿಂದ ಬಳಲುತ್ತಿರುತ್ತಾರೆ. ಏಕೆ ಈ ಪರಿ? ಹಾಗಾದರೆ ಸತ್ಯ,ಧರ್ಮಗಳಿಗೆ ಪ್ರತಿಫಲ ಎನ್ನುವುದು ಇಲ್ಲವೇ ? ಎಂಬ ಪ್ರಶ್ನೆ ಕಾಡುತ್ತದೆ. ಹೆಚ್ಚಿನವರು, "ಇದೆಲ್ಲಾ ಪೂರ್ವಾರ್ಜಿತ, ಕರ್ಮಫಲಗಳ ಪ್ರಾಪ್ತಿ" ಎಂದು ಅಗೊಚರಕ್ಕೆ ದಾಟಿಸುತ್ತೇವೆ.   



ಒಮ್ಮೆ ಅರ್ಜುನನಿಗೂ ಈ ಸಂದೇಹ ಉಂಟಾಯಿತು. (ಈ ಕಥೆ ಮಹಾಭಾರತದಲ್ಲಿ ಬರುತ್ತದೆ). ಇದೇ ಪ್ರಶ್ನೆಯನ್ನವನು ಶ್ರೀಕೃಷ್ಣ ಪರಮಾತ್ಮನ ಮುಂದಿಟ್ಟ. ಕೃಷ್ಣ ಎಂದಿನಂತೆ, "ನೀನೇ ಸ್ವತಃ ಕಂಡರೆ ಸರಿಯಾದೀತು. ನಾವೊಮ್ಮೆ ಪ್ರಪಂಚ ಪರ್ಯಟನೆ ಮಾಡಿ ಬರುವ. ಸಂದೇಹಕ್ಕೆ ಸಮಾಧಾನ ಸಿಗಬಹುದು"ಎಂದು ಹೇಳಿ ಅರ್ಜುನನನ್ನು ಕರೆದುಕೊಂಡು ಹೊರಟ. ಸಾಮಾನ್ಯರಂತೆ ವೇಷ ಧರಿಸಿ ಇಬ್ಬರು ಹೊರಟರು. ತಿರುಗುತ್ತಾ ತಿರುಗುತ್ತಾ ಸಾಯಂಕಾಲವಾಗುತ್ತಿರುವಂತೆಯೇ ಒಂದು ಹಳ್ಳಿಗೆ ಬಂದರು. ಕಡುಬಡವನ ಮನೆಯಾಗಿತ್ತದು. ಅಂದು ಬೆಳಿಗ್ಗೆಯಿಂದ ಎಷ್ಟು ಪ್ರಯತ್ನಿಸಿದರೂ ಈ ಮನೆಯೊಡೆಯನಿಗೂ ಏನು ಕೆಲಸ ಸಿಕ್ಕಿರಲಿಲ್ಲ. ಒಂದೇ ಒಂದು ಕಾಸು ದುಡಿಮೆಯಿರಲಿಲ್ಲ. ಇನ್ನು ನಿತ್ಯ ಏಕಾದಶಿ ಇರುವ ಮನೆಯಲ್ಲಿ ಒಂದು ಕಾಳು ಅಕ್ಕಿಯೂ ಇರಲಿಲ್ಲ. ಇವನ ಸೋತ ಮುಖ ಕಂಡ ಮನೆಯೊಡತಿ, ಸಾಂತ್ವನದ ಮಾತುಗಳನ್ನಾಡುತ್ತ ಇದ್ದ ಒಂದು ಲೋಟ ಹಾಲನ್ನು ಅವನ ಮುಂದೆ ಇಟ್ಟಿದ್ದಳು. ಇನ್ನೇನು ಮನೆಯೊಡೆಯ ಹಾಲು ಕುಡಿಯಬೇಕು,ಅಷ್ಟರಲ್ಲಿ ಕೃಷ್ಣಾರ್ಜುನರು  ಹೊಸ್ತಿಲಲ್ಲಿ ನಿಂತರು. "ಅಯ್ಯಾ! ಹಸಿವಾಗುತ್ತಿದೆ. ತಿನ್ನಲು ಏನಾದರೂ ಸಿಗಬಹುದೇ? ಈ ಒಂದು ರಾತ್ರಿ ಉಳಿಯಲು ವ್ಯವಸ್ಥೆ ಮಾಡಬಹುದೇ?" ಎಂದರು.

ಮನೆಯೊಡೆಯನ ಕಣ್ಣಲ್ಲಿ ನೀರಿಳಿಯಿತು." ಸ್ವಾಮಿ, ಈ ಒಂದು ಲೋಟ ಹಾಲು ಬಿಟ್ಟರೆ ಮನೆಯಲ್ಲಿ ಏನೂ ಇಲ್ಲ. ದಯವಿಟ್ಟು ಸ್ವೀಕರಿಸಿ" ಎನ್ನುತ್ತಾ ಹಾಲಿನ ಲೋಟ ಅವರ ಮುಂದೆ ಇಟ್ಟ. ತಾವು ಉಪಯೋಗಿಸುತ್ತಿದ್ದ ಹರುಕು ಕಂಬಳಿ, ಮುರುಕು ಚಾಪೆಗಳನ್ನ ಹಾಸಿ ಹಾಸಿಗೆ ತಯಾರಿಸಿದ. ಇಬ್ಬರ ಕಾಲು ತೊಳೆದು ಪಾದೋದಕ ಪ್ರೋಕ್ಷಿಸಿಕೊಂಡ. ಕೃಷ್ಣಾರ್ಜುನರು ಸಂತೋಷದಿಂದ ಮಲಗಿ ನಿದ್ರೆ ಮಾಡಿದರು. ಬೆಳಿಗ್ಗೆ ಎದ್ದು ಹೋಗುತ್ತಿರುವಾಗ ಕೃಷ್ಣ ಒಮ್ಮೆ ಬಡವನ ಮನೆಯತ್ತ ತಿರುಗಿ ನೋಡಿ, "ಈ ಹಸು ಸತ್ತುಹೋಗಲಿ"ಎಂದ.


ಅರ್ಜುನನಿಗೆ ಸಿಟ್ಟು ಬಂತು. ತಮ್ಮ ಬಡತನದಲ್ಲಿಯೇ ಅತಿಥಿ ಸತ್ಕಾರ ಮಾಡಿದ ಈ ಸಾತ್ವಿಕನನ್ನು ಹೀಗೆ ಶಪಿಸುವುದೇ? ಇವನೊಂದಿಗೆ ಬಂದಿದ್ದೆ ತಪ್ಪಾಯಿತು ಎಂದು ಸಿಡಿಮಿಡಿಗೊಂಡ. ಮಾತಾಡಲಿಲ್ಲ. ಮುಂದೆ ಹೋಗುತ್ತಾ ಭಾರಿ ಸಿರಿವಂತನ ಮನೆಯೊಂದು ಎದುರಾಯಿತು. ಯಾವುದೊ ಮಹೋತ್ಸವ ನಡೆಯುತ್ತಿತ್ತು. ಸಂಗೀತ ಕೇಳುತ್ತಿತ್ತು. ಅಡುಗೆಯ ಘಮಘಮದಿಂದ ಬಾಯಲ್ಲಿ ನೀರು ಒಸರುತ್ತಿತ್ತು. ಕೃಷ್ಣಾರ್ಜುನರು ದಿಡ್ಡಿ ಬಾಗಿಲಲ್ಲಿ ನಿಂತು, "ಅಯ್ಯಾ! ಹಸಿವು,ತಿನ್ನಲು ಏನಾದರೂ ಸಿಗಬಹುದೇ?" ಎಂದರು. "ಛೀ! ಭಿಕ್ಷುಕರಿಗೆ ಇಲ್ಲಿ ಏನು ಸಿಗದು ತೊಲಗಿ" ಎಂದರು ದ್ವಾರಪಾಲಕರು. ಇವರು ಕದಲದೇ, "ನಾವು ಯಾತ್ರಿಕರು,ಆಹಾರ ನೀಡದೆ ಹೋಗಲಾರೆವು"ಎಂದರು. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ಗಲಾಟೆ ಕೇಳಿ ಮನೆಯೊಡೆಯ ಹೊರಗೆ ಬಂದ. ನಡೆದುದ್ದನ್ನು ಕೇಳಿ, "ನಿಮಗೆ ಯೋಗ್ಯವಾದುದ್ದನ್ನು ಕೊಡೋಣ, ಚಿಂತಿಸದಿರಿ. ಯಾರಲ್ಲಿ! ಇಬ್ಬರಿಗೂ ತಲಾ ಹತ್ತು ಹತ್ತು ಚಾವಟಿ ಏಟು ಕೊಟ್ಟು ಕಳುಹಿಸಿ" ಎಂದು ಒಳಗೆ ಹೋದ.


ಏಟು ತಿಂದು, ಮೈ-ಕೈಗಳ ಚರ್ಮ ಸುಲಿದು ಹೋಯಿತು. ಕೃಷ್ಣ ಧೂಳಿನಲ್ಲಿ ಬಿದ್ದವ ಎದ್ದು ನಿಂತು, "ಈ ಸಿರಿವಂತನ ಸಂಪತ್ತು ಇಪ್ಪತ್ತು ಪಟ್ಟಾಗಲಿ, ಇವನ ಸುಖ ಜಗತ್ತನ್ನೇ ಮರೆಸಲಿ" ಎಂದು ಹೇಳಿ ಹೊರಟ. ಈಗ ಅರ್ಜುನನ ಸಿಟ್ಟಿಗೆ ಮೇರೆ ಇಲ್ಲವಾಯಿತು. "ಛೇ! ಎಂಥ ಕೃತಘ್ನ ನೀನು. ಹಾಲು ಕುಡಿಸಿದವನ ಹಸು ಸಾಯಲಿ ಎಂದು ಶಪಿಸಿದೆ. ಛಡಿ ಏಟು ಹಾಕಿಸಿದವನ ಸಂಪತ್ತು ನೂರಾಗಲಿ ಎನ್ನುತ್ತಿರುವೆ" ಎಂದ. 


ಆಗ ಕೃಷ್ಣ "ಅರ್ಜುನಾ,ಈ ಜಗತ್ತೊಂದು ಮಾಯೆ. ಯಾವುದು ಹೇಗಿರುತ್ತದೋ ತಿಳಿಯಲಾಗದು. ಬಡವ ಕುಕರ್ಮ ಫಲದಿಂದ ಬಡವನಾದ. ಆದರೆ ಸಂಸ್ಕಾರಬಲದಿಂದ ಸಾತ್ವಿಕನಾದ. ಕರ್ಮಫಲ ಭೌತಿಕಕ್ಕೆ ಮಾತ್ರ ಸೀಮಿತವಾಯಿತು. ಈ ಕರ್ಮಫಲ ಇನ್ನೊಂದು ಜನ್ಮದಲ್ಲೂ ಮುಂದುವರಿಯುವಷ್ಟಿತ್ತು. ಹಸುವಿನ ನಷ್ಟದಿಂದ ಅವನು ಇನ್ನೂ ಹೆಚ್ಚು ಪರಮಾರ್ಥದೆಡೆಗೆ ಒಲಿದು ಕರ್ಮಬಂಧನದ ಬಿಡುಗಡೆಗೆ ಇನ್ನಷ್ಟು ಸತ್ಕರ್ಮ ಮಾಡುತ್ತಾನೆ. ಈ ಜನುಮಕ್ಕೆ ಅವನಿಗೆ ಈ ಭವದಿಂದ ಬಿಡುಗಡೆಯಾಗುತ್ತದೆ. ಇನ್ನು ಸಿರಿವಂತನನ್ನು ನೋಡು. ಭೌತಿಕ ಸತ್ಕರ್ಮ ಫಲ ಈ ಶ್ರೀಮಂತಿಕೆ. ಇಲ್ಲಿ ಸಂಸ್ಕಾರವಿಲ್ಲ. ಆದುದರಿಂದ ಅಹಂಕಾರ,ಲೋಲುಪತೆ. ಈ ಅಹಂಕಾರವೇ ಸಾವಾಗಬಹುದು.ಕಾರಣವಿಲ್ಲದೆ ಆಹಾರ ಬೇಡಿದವರಿಗೆ ಛಡಿ ಏಟು ನೀಡಿದ. ಮತ್ತಷ್ಟು ಕುಕರ್ಮ ಸೇರಿಕೊಂಡಿತು. ಸಿರಿ ನೂರು ಪಟ್ಟಾಗಲಿ  ಎಂದೆ. ಅಂದರೆ ಕುಕರ್ಮಗಳು ಬೆಳೆಯುತ್ತವೆ ಎಂದಾಯಿತು. ಈ ಸಿರಿಯ ಮದದಿಂದ ನೂರು ಜನ್ಮಗಳಲ್ಲಿ ಕುಫಲ ಸಂಚಯಿಸುತ್ತಾರೆ. ಈಗ ಬಡವ ಪಡುವ ಬವಣೆಯ ನೂರು ಪಾಲು,ನೂರು ಜನ್ಮಗಳಲ್ಲಿ ಅವನದಾಗುತ್ತದೆ. ಈಗ ಹೇಳು, ಯಾವುದು ಶಾಪ? ಯಾವುದು ವರ? ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಕೆಲವರು ನಾನಾ ರೀತಿಯ ತೊಂದರೆಗಳಿಂದ ನರಳುವುದೇಕೆ? ಕೆಲವರ ಅಪ್ರಯತ್ನದಿಂದ  ಸಿರಿವಂತರೂ ಸುಖಿಗಳೂ ಆಗಿರುವುದೇಕೆ ಎಂಬ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇನು"? 


ನಿನ್ನೆಗಳು, ನಾಳೆಗಳು ಅಜ್ಞಾನದ ಪರದೆಯ ಹಿಂದೆ ಮರೆಯಾಗಿರುವುದೇ ನಮ್ಮ ಗೊಂದಲಕ್ಕೆ ಕಾರಣ. ಇನ್ನು ಸುಖವೆಂದರೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಒಬ್ಬನ ಸುಖ ಮತ್ತೊಬ್ಬನ ದುಃಖವಾಗಬಹುದು. ಸುಖದ ಹುಡುಕಾಟವು ಮನುಷ್ಯನಲ್ಲಿ ಅಂತರ್ಗತವಾಗಿರುವ ಆನಂದದ ಹುಡುಕಾಟವೇ ಎನ್ನುತ್ತದೆ ನಮ್ಮ ಪ್ರಾಚಿನ ಜ್ಞಾನ.



No comments:

Post a Comment

CLICK HERE