Monday 9 February 2015

ಧರ್ಮ-ಅಧರ್ಮಗಳ ತಾಕಲಾಟ...




ಇದೊಂದು ಮಾರ್ಮಿಕ ಕಥೆ. 
ಇಂದಿನ ಕಾಲಕ್ಕೆ ಎಷ್ಟು ಸೂಕ್ತವೋ ಹೇಗೆ 
ಅನ್ವಯಿಸಬಹುದೋ ತಿಳಿಯದು. ಆದರೆ, 
ಒಂದು ವೇಳೆ ಬದುಕಿನಲ್ಲಿ ಅಳವಡಿಸಿಕೊಂಡರೆ, 
ಅದು ಧನ್ಯಾತ್ಮಕವಾಗಿ ಬದಲಾಗುವುದರಲ್ಲಿ 
ಸಂಶಯವಿರದು ಎನ್ನುತ್ತದೆ ಒಳಮನಸ್ಸು.




ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈಮುರಿದು ದುಡಿಯುತ್ತಿದ್ದ. ಗಳಿಕೆಯಿಂದ ಅಕ್ಕಿ,ಬೇಳೆ ತಂದು ಅಡುಗೆ 
ಮಾಡುತ್ತಿದ್ದ. ಅತಿಥಿಗಳಿಗಾಗಿ ಕಾಯುತ್ತಿದ್ದ. ಯಾರಾದರೊಬ್ಬರು ಬಂದೇ ಬರುತ್ತಿದ್ದರು. ಆ ಕಾಲದಲ್ಲಿ ಇಂದಿನಂತೆ 
ರೆಸ್ಟುರಾಗಳು,ಹೊಟೇಲುಗಳು ಇರಲಿಲ್ಲ. ಅನ್ನ ಮಾರುವುದು ಪಾಪ ಎಂಬ ಭಾವನೆ ಇತ್ತು. ಬಾಗಿಲಿಗೆ ಬಂದವರು, 
ಅತಿಥಿಗಳು,ಭಗವಂತನ ರೂಪ ಎಂಬ ಚಿಂತನೆ ಇತ್ತು. ಅನ್ನ,ವಸತಿ ನೀಡುವುದು ಭಾಗ್ಯ ಎಂದು ಪರಿಗಣಿಸಲಾಗುತ್ತಿತ್ತು.


ಅಂದೂ ಹೀಗೆ ಕಾಯುತ್ತಿರುವಾಗ ಸಂತರ ಗುಂಪೊಂದು ಅತ್ತ ಬಂತು. ಇವನ ಆಹ್ವಾನ ಕೇಳಿ, "ಬರಲು ಅಡ್ಡಿ ಇಲ್ಲ. ಆದರೆ ನಮ್ಮ
ಕೆಲವು ನಿಯಮಗಳಿವೆ. ನಾವು ಬೆವರಿನ ದುಡಿಮೆಯ ಅನ್ನ ಮಾತ್ರ ಸ್ವೀಕರಿಸುತ್ತೆವೆ ಮತ್ತು ದುಡಿಮೆ ನ್ಯಾಯಮಾರ್ಗದ್ದಾಗಿರಬೇಕು. 
ನಾವು ಇಲ್ಲಿಂದ ಹೋಗುವವರೆಗೆ ನೀನು ನಮ್ಮೋಂದಿಗೇ ಇರಬೇಕು. ಈ ಕ್ಷಣದಿಂದ ನಾವು ಹೋಗುವವರೆಗಿನ ಎಲ್ಲಾ ಒಳ್ಳೆಯ, ಕೆಟ್ಟ 
ಫಲಗಳಲ್ಲಿ ನೀನು ಭಾಗೀದಾರನಾಗಿರಬೇಕು. ಆಗಬಹುದು ಎಂದಾದರೆ ನಾವು ಒಳಗೆ ಬರುತ್ತೇವೆ" ಎಂದರು. ಇವನು ಒಪ್ಪಿದ. ಎಲ್ಲರೂ
ಭೋಜನ ಸ್ವೀಕರಿಸಿ ಅಡ್ಡಾದರು.

ಮಧ್ಯರಾತ್ರಿಯಾಗಿತ್ತು. ಯಾರೋ ಓಡುತ್ತಿರುವ ಶಬ್ದ ಕೇಳಿಸಿತು. ಏನು. ಎತ್ತ ಎಂದು ನೋಡುವಷ್ಟರಲ್ಲಿ ಬಟ್ಟೆಯ ಗಂಟೊಂದು ಇವರ 
ಮಧ್ಯೆ ಬಂದು ಬಿತ್ತು. ಅದರ ಹಿಂದೆಯೆ ದೊಂದಿಯ ಬೆಳಕು ಹಿಡಿದ ರಾಜಭಟರೂ ಒಳಬಂದರು. ಬಂದವರೇ ಇವರೆಲ್ಲರನ್ನು 
ಹೆಡೇಮುರಿ ಕಟ್ಟಿ, ರಾಜನ ಮುಂದೆ ನಿಲ್ಲಿಸಿದರು. ರಾಜ ಇವರನ್ನು ದೀರ್ಘವಾಗಿ ದೄಷ್ಟಿಸಿ ನೋಡಿ, "ನೋಡಿದರೆ ಇವರು 
ಸಾಧುಗಳಂತೆ ಕಾಣುತ್ತಾರೆ. ಇವರು ಕಳ್ಳರೆಂದು ನನ್ನ ಮನಸ್ಸು ಒಪ್ಪುತ್ತಿಲ್ಲ." ಎಂದ. ಕೂಡಲೇ ಹಿರಿಯ ಸಾಧು, "ರಾಜನ್, 
ನಿನೇಣಿಸಿದಂತೆ ನಾವು ಸಾಧುಗಳು, ಅಲೆಮಾರಿಗಳು. ಈ ರಾತ್ರಿ ಈ ಮನುಷ್ಯನ ಬೆವರಿನ ಅನ್ನವುಂಡು ವಿಶ್ರಮಿಸುತ್ತಿರುವಾಗ 
ಯಾರೋ ಆ ಗಂಟನ್ನು ಒಳಗೆಸೆದರು. ಈ ಪುನ್ಯಾತ್ಮನದು ನಿಜವಾದ ಸಂತನ ಬದುಕೇ ಇರಬೇಕು. ಏಕೆಂದರೆ, ಇವನ ಅನ್ನದಿಂದ 
ನಮಗೆ ರಾಜದರ್ಶನ ಪ್ರಾಪ್ತಿಯಾಯಿತು.. ಆದರೆ ಕೈ-ಕಾಲು ಕಟ್ಟಿ ತಂದ ಶಿಕ್ಷೆ ಹಾಗೂ ಕಳ್ಳತನದ ಆರೋಪವೂ ಬಂತು. ಅದು ಈ
ಗಂಟಿನ ಸಂಸರ್ಗದಿಂದ ಉಂಟಾಯಿತು. ಈ ಗಂಟಿನಲ್ಲಿ ಅಧರ್ಮದ ವಸ್ತು ಇರಬೇಕು" ಎಂದ.


ಗಂಟನ್ನು ಬಿಡಿಸಿದಾಗ ಮಹಾರಾಣಿಯ ಒಡವೆಗಳು ಕಂಡವು. ಅರೇ, ರಾಣಿಯ ವಸ್ತು ಅಧರ್ಮದ್ದಾಗುವುದೆಂತು? ಏನೋ ರಹಸ್ಯವಿದೆ 
ಎಂದು ರಾಜ ರಾಣಿಯನ್ನು ಕರೆಸಿದ. "ಇವು ನನ್ನ ಒಡವೆಗಳೇನೋ ನಿಜ. ಆದರೆ ಭಂಡಾರದಿಂದ ಬಂದವು ಅಲ್ಲ. ದೇವಮಂದಿರಗಳ 
ಉಸ್ತುವಾರಿ ನೋಡುವ ಅಧಿಕಾರಿಯ ಪತ್ನಿ ಇವುಗಳನ್ನು ಉಡುಗೊರೆಯಾಗಿ ನೀಡಿದ್ದಳು" ಎಂದಳು.
ಅಧಿಕಾರಿಯನ್ನು ಕರೆಸಲಾಯಿತು. ರಾಜಸಭೆಯ ಕರೆ ಎಂದಾಗಲೇ ಅಧಿಕಾರಿ ನಡುಗಲು ಶುರುಮಾಡಿದ. ರಾಜನ ಮುಂದೆ ನಿಲ್ಲಿಸಿದಾಗ ಅವನ ಮುಖ ಕಪ್ಪಿಟ್ಟಿತು.



ರಾಜನ ಕಾಲಿಗೆ ಬಿದ್ದು ತನ್ನ ತಪ್ಪನ್ನು ಮನ್ನಿಸುವಂತೆ ಬೇಡತೊಡಗಿದ. ನಡೆದ ವಿಷಯವಿಷ್ಟು, ಅವ ದೇವಸ್ಥಾನಗಳ ಹುಂಡಿಯಲ್ಲಿ 
ಬೀಳುವ ಚಿನ್ನ, ಹಣದಿಂದ ಭೂಮಿಕಾಣಿ ಕೊಳ್ಳುತ್ತಿದ್ದ. ಹೆಂಡತಿಗೆ ಆಭರಣಗಳನ್ನು ಮಾಡಿಸುತ್ತಿದ್ದ. ಒಂದು ಸಣ್ಣ ಭಾಗ ಅವನ ಸ್ವಂತಕ್ಕೆ 
ಹೋಗುತ್ತಿತ್ತು. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಕೂಡಲೇ ಸಾಧುವೆಂದ, "ಇದು ದೇಗುಲಗಳ ಜೀರ್ಣೋಧ್ದಾರಕ್ಕೆ, ಕೆರೆಕಟ್ಟೆ 
ಕಟ್ಟಲು, ಸಾಲು ಮರ ನೆಡಲು, ಗುರುಕುಲಗಳಿಗೆ ವಿನಿಯೋಗವಾಗಬೇಕಾಗಿದ್ದ ದೇಣಿಗೆ. ಸ್ವಂತಕ್ಕೆ ಉಪಯೋಗಿಸುವುದು 
ಅಧರ್ಮವಾಯಿತು. ಅದರ ಸ್ಪರ್ಶದಿಂದ ನಮಗೆ ಶಿಕ್ಷೆಯಾಯಿತು."



ಇಂದು ನಮ್ಮ ಬದುಕಿನ ವಿಧಾನ ಬದಲಾಗಿದೆ. ಅನ್ನ ವಿಕ್ರಯ ಹಾಗೂ ವಿಕ್ರಯದ ಅನ್ನ ಸ್ವೀಕಾರ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. 
"ತಿನ್ನುವ ಅನ್ನದ ಮೂಲ", "ಅದು ಧರ್ಮಸಮ್ಮತವಾದ ಗಳಿಕೆಯಾಗಿರಬೇಕು", ಪರಾನ್ನದಲ್ಲಿ ಅದರ ಧಾತೄವಿನ ಕರ್ಮಲೇಪವೂ 
ಇರುತ್ತದೆ" ಎಂಬುದೇ ಒಂದು "ಮಿಥ್ಯೆ" ಎಂದು ಪರಿಗಣಿಸುತ್ತೇವೆ. ಹೇಗೆ ಬಂದರೇನು, ಹಣ ಹಣವೇ.


ಅದು ಇರುವುದೇ ನಮ್ಮ ಸುಖಕ್ಕಾಗಿ ಎಂಬ ಭಾವನೆ ಬಲವಾಗಿ ಬೇರುಬಿಟ್ಟಿದೆ ನಮ್ಮಲ್ಲಿ.

Saturday 7 February 2015

ಅನುಕಂಪ - ಅನುರಾಗದ ಸಾಮಗಾನ ಮೈತ್ರೀ ಭಾಗ-2


ಅನುಕಂಪ - ಅನುರಾಗದ ಸಾಮಗಾನ ಮೈತ್ರೀ ಭಾಗ-2

ಪರಮ ಸಾತ್ವಿಕನೊಬ್ಬನಿಗೆ ಸಾವು ಬಂತು. ಸಾವಿನ ಅನಂತರ ಅವನು ಪಿಶಾಚಿಯಾದ. ಈ ಪಿಶಾಚಿ ಸ್ಥಿತಿಯಲ್ಲೂ ಅವನು ಸಾತ್ವಿಕನಾಗಿಯೇ ಇದ್ದುದರಿಂದ ಅವನಿಗೆ ಸಹಚರರೇ ಇಲ್ಲದಂತಾಯಿತು.

ಏಕೆಂದರೆ, ಈ ಸ್ಥಿತಿಯಲ್ಲೂ ಅವನು ಯಾರಿಗೂ ತೊಂದರೆಯಗದಂತೆ ಬದುಕುತ್ತಿದ್ದುದರಿಂದ ಬೇರೆ ದೆವ್ವಗಳು ಅವನನ್ನು ದೂರವೇ ಇಟ್ಟಿದ್ದವು.

 ಈ ಏಕಾಂಗಿತನದಿಂದ ಬೇಸತ್ತು ಅವನು  ತನಗೊಂದು ಜೊತೆಗರನನ್ನು ನೀಡುವಂತೆ ಭಗವಂತನಲ್ಲಿ ಬೇಡಿದ.

ದೇವರು ಒಪ್ಪಿದ. "ಶನಿವಾರ ಸಂಜೆ, ಸೂರ್ಯ ಕಂತುವ ಹೊತ್ತಿನಲ್ಲಿ ಯಾರಾದರೂ ಅಪಮ್ರತ್ಯುವಿಗೆ ಬಲಿಯಾದರೆ, ಅಂಥವರು ನಿನ್ನ ಜೊತೆಗಾರರಾಗುತ್ತಾರೆ" ಎಂದ.

ಸರಿ, ಇವನು "ಶನಿವಾರ ಸಂಜೆ ಅಪಮ್ರತ್ಯುವಿಗಿಡಾಗುವ" ವ್ಯಕ್ತಿಯ ಹುಡುಕಾಟ ಶುರುವಾಯಿತು.

ಶನಿವಾರವೇ, ಸೂರ್ಯ ಮುಳುಗುವ ಹೊತ್ತಿಗೆ, ಅಪಮ್ರತ್ಯುವಿಗೇ ತುತ್ತಾಗುವ ಸಾಧ್ಯತೆ ಎಷ್ಟಿರುತ್ತದೆ?

ಎಂದೋ ಅಪರೂಪಕ್ಕೆ ವರುಷಕ್ಕೋ ಎರಡು ವರುಷಗಳಿಗೋ ಒಮ್ಮೆ ಬರುವ ಸಾಧ್ಯತೆ ಇದ್ದರೆ ಇದ್ದೀತು! ಹೀಗೆ ಇರುವಾಗ ಇವ ಅಂಥ ಘಟನೆ ನಡೆಯುವ ಸ್ಠಳಕ್ಕೆ ಹೋಗಿ ಕಾದು ಕುಳಿತುಕೊಳ್ಳುತ್ತಿದ್ದ.

ಆಹಾ! ಇಂದಾದರೂ ಒಂದು ಜೊತೆ ಸಿಗುತ್ತದೆ ಎಂದು ಸಂತೊಷಿಸುತ್ತಿದ್ದ.

ಆದರೆ, ಆ ಘಟನೆ ಘಟಿಸುವ ಕ್ಷಣ ಬಂದಾಗ ಅವನ ಹ್ರದಯ ದ್ರವಿಸುತಿತ್ತು.

ಬಂಧು-ಬಾಂಧವರ ಮುಖ ನೋಡಿದಾಗ, ಈ ವ್ಯಕ್ತಿಯ ವಿಯೋಗದಿಂದ ಅವರು ಅನುಭವಿಸುವ ನೋವಿನ ಅರಿವಾಗುತ್ತಿತ್ತು.

ಕೂಡಲೇ ಇವ ಓಡಿಹೋಗಿ ಆ ವ್ಯಕ್ತಿಯನ್ನು ಉಳಿಸುತ್ತಿದ್ದ. "ಭಗವಂತ, ಈ ಬಾರಿ, ಈ ವ್ಯಕ್ತಿಯನ್ನು ರಕ್ಷಿಸು.

ಮುಂದೆ ಎಂದಾದರೂ ಯಾರಾದರೂ ಸಿಗುವವರೆಗೆ ನಾನು ಎಕಾಂಗಿಯಾಗಿ ಕಾಯಲು ತಯಾರಿದ್ದೇನೆ.

ನಾನು ಯಾವುದೇ ಸಣ್ಣ ಒಳ್ಳೆಯ ಕೆಲಸ ಮಾಡುವುದಾದರೆ ಅದರ ಪುಣ್ಯಬಲದಿಂದ ಈ ವ್ಯಕ್ತಿಯನ್ನು ಬದುಕಿಸು" ಎಂದು ಬೇಡುತ್ತಿದ್ದ.

ಭಗವಂತ ನಸುನಗುತ್ತಾ "ಅಸ್ತು" ಎನ್ನುತ್ತಿದ.

ಒಂದಲ್ಲ, ಎರಡಲ್ಲ, ನೂರಾರು ಬಾರಿ ಇದು ಹೀಗೆ ನಡೆಯಿತು.

ಸಾತ್ವಿಕ ಪಿಶಾಚಿ ಕಡೆಗೂ ಎಕಾಂಗಿಯಾಗಿಯೇ ಉಳಿಯಿತು. ಏಕೆಂದರೆ ಅದರ ಹ್ರದಯದಲ್ಲಿ "ಮೈತ್ರಿ" ತುಂಬಿತ್ತು.
ತನಗಿಂತ ಹೆಚ್ಹಾಗಿ ಪರರ ಬಗ್ಗೆ ಕಾಳಜಿ ತುಂಬಿತ್ತು.


ಮುಕ್ತಾತ್ಮ ಜಗತ್ತಿಗೆ ಬೆಲ್ಲದಂತಿದ್ದರೂ ತಾನು ಮಾತ್ರ ಕಲ್ಲಿನಂತೆ ನಿಸ್ಪ್ರಹ.

ಜಗದ ಸಮಸ್ತ ಜೀವರಾಶಿಗಳಲ್ಲಿ ಅವನಿಗೆ 'ತಾನೆ' ಕಂಡುಬರುತ್ತದೆ. ತನ್ನೊಳಗೆ ಸಮಸ್ತ ಬ್ರಹ್ಮಾಂಡದ ಇರುವಿಕೆಯ ಅನುಭವವಾಗುತ್ತದೆ.

 ಸದಾ ಸುಖಿ ಇಂಥವ. ಆನಂದವೇ ಇವನ ನಿರಂತರ ಮನೊಭಾವ. ಇವನೇ ಪರಮ ಆತ್ಮ. ಇವನೇ ಮುಕ್ತಾತ್ಮ. ಇವನೇ ವಿಶ್ವ ಚೈತನ್ಯದ ಸಾಕಾರರೂಪ.  

Friday 6 February 2015

ಅನುಕಂಪ - ಅನುರಾಗದ ಸಾಮಗಾನ "ಮೈತ್ರೀ" ಭಾಗ-೧


ಅನುಕಂಪ - ಅನುರಾಗದ ಸಾಮಗಾನ "ಮೈತ್ರೀ"   ಭಾಗ-೧



ಒಮ್ಮೆ ದೆವತೆಗಳು ಭಗವಂತನಲ್ಲಿ ಒಂದು ಪ್ರಶ್ನೆ ಕೇಳಿದರಂತೆ, "ದೇವಾ, ಕಲ್ಲಿಗಿಂತ ಬಲವಾದುದೇನಾದರೂ ಇದೆಯೇ?" ಭಗವಂತ ಉತ್ತರಿಸಿದ,

 "ಹೌದು, ಕಲ್ಲಿಗಿಂತ ಕಠಿಣವಾದುದು ಕಬ್ಬಿಣ, ಕಬ್ಬಿಣದಿಂದ ತಯಾರಾದ ಸುತ್ತಿಗೆ ಕಲ್ಲನ್ನೂ ಒಡೆದು ಪುಡಿಮಾಡಬಲ್ಲದು." ದೇವತೆಗಳಿಗೆ ಆಶ್ಚರ್ಯವಾಯಿತು.

 ಮತ್ತೆ ಕೇಳಿದರು, "ಕಬ್ಬಿಣಕ್ಕಿಂತ ಶಕ್ತಿಯುತವಾದುದೇನಾದರೂ ಇದೆಯೆನು?", "ಹೌದು, ಬೆಂಕಿಯಲ್ಲಿ ಕಾಸಿದರೆ ಕಬ್ಬಿಣ ಕರಗಿ ನೀರಾಗುತ್ತದೆ.

ಆದುದರಿಂದ ಕಬ್ಬಿಣ ಕರಗಿಸಬಲ್ಲ ಬೆಂಕಿ ಕಬ್ಬಿಣಕ್ಕಿಂತ ಶಕ್ತಿಯುತವಾದುದು", "ಬೆಂಕಿಗಿಂತ ಶಕ್ತಿಯುತವಾದುದೂ ಏನಾದರೂ ಇರಬಹುದು ಅಲ್ಲವೇ?" ಎಂದರು ದೆವತೆಗಳು.

"ಬೆಂಕಿ ಎಷ್ಟೇ ಬಲವತ್ತರವಾಗಿ ಉರಿಯುತ್ತಿರಲಿ, ಅದನ್ನು ಆರಿಸುವುದು ನೀರು. ಆದುದರಿಂದ ನೀರು ಬೆಂಕಿಗಿಂತ ಬಲಶಾಲಿ" ಎಂದುತ್ತರ ಬಂತು.

ಹಾಗಾದರೆ ನೀರಿಗಿಂತ ಬಲಶಾಲಿ ಯಾರು?" ಎಂದಾಯಿತು.

"ನೀರನ್ನು ಹಾರಿಸಬ್ಲ್ಲದು ಗಾಳಿ. ಎಂಥ ಮಳೆ ಸುರಿಯುತ್ತಿದ್ದರೂ ವೇಗವಾಗಿ ಬೀಸುವ ಗಾಳಿ ಅದನ್ನು ಚದುರಿಸಬಲ್ಲದು.

ಆದುದರಿಂದ ನೀರಿಗಿಂತ ಗಾಳಿ ಬಲಶಾಲಿ" ಎಂದುತ್ತರಿಸಿದ ಭಗವಂತ ಕಡೆಗೆ ಹೀಗೆ ಹೇಳಿದ, "ಇವೆಲ್ಲವೂ ಅವುಗಳ ಸ್ಥಾನದಲ್ಲಿ ಬಲಶಾಲಿಗಳೇ.

 ಆದರೆ, ಇವೆಲ್ಲದಕ್ಕಿಂತ ಬಲಶಾಲಿಯಾದುದು ಒಂದಿದೆ. ಅದು "ಮೈತ್ರೀ". ಅನುಕಂಪ, ಕರುಣೆ, ಪ್ರೇಮಗಳ ಸಮ್ಮಿಳಿತ ರೂಪವೇ "ಮೈತ್ರೀ".

ಇದು ಸಮಸ್ತ ಚರಾಚರಗಳ ಮನೋಮೂಲದಲ್ಲಿದೆ. ಜಗತ್ತು ಶಾಂತಿಯಿಂದ ಬಾಳಬೇಕಾದರೆ ಇದು ಅತ್ಯಗತ್ಯ.

 ಮತ್ತೆ ಇದು ತನಗೆ ತಾನೆ ಮಾಡಿಕೊಳ್ಳುವ ಸೇವೆಯೂ ಹೌದು. ನಾನು ಬ್ರಹ್ಮ ಎಂದಾದರೆ ಸಮಸ್ತ ಜಗತ್ತಿನ ಅಣುವೂ ಬ್ರಹ್ಮನೇ.

 ಆದುದರಿಂದ ಈ 'ಬ್ರಹ್ಮ'ನ ಆರಾಧನೆಯ ಪ್ರಥಮ ಹಾಗೂ ಪ್ರಮುಖ ಪುಷ್ಪ. ಇದಕ್ಕಿಂತ ಪ್ರಬಲವಾದುದು ಯಾವುದೂ ಇಲ್ಲ" ಎಂದ ಭಗವಂತ.



ಮುಂದುವರಿಯುವುದು......

CLICK HERE