Thursday 11 February 2016

ಮಾತು ಮನೆ ಹಾಳು ಮಾಡೀತು!

ಒಂದು ಹಳ್ಳಿಯಲ್ಲಿ ಗಂಡ-ಹೆಂಡತಿ ಸುಖವಾಗಿದ್ದರು. ಮದುವೆಯಾಗಿ ಹತ್ತು ವರ್ಷ ಕಳೆದಿರಲಿಲ್ಲ. ಅನ್ಯೋನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲವಾಗಿತ್ತು. ಗಂಡ ಬೆಳಗಾಗೆದ್ದು ಹೊಲಕ್ಕೆ ಹೋಗುತ್ತಿದ್ದ. ಹೆಂಡತಿ ರೊಟ್ಟಿ,ಪಲ್ಲೆ, ಮೊಸರು ಕಟ್ಟಿಕೊಂಡು ಮಧ್ಯಾಹ್ನ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿದ್ದಳು. ಇಬ್ಬರೂ ಲಲ್ಲೆಯಾಡುತ್ತಾ ಊಟ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಗಂಡ ಮನೆಗೆ ಮರಳುತ್ತಿದ್ದ. ದಾರಿಯಲ್ಲಿ ಒಂದೇ ಒಂದು ಸಣ್ಣ ಗಿಳಾಸು ಹೆಂಡ ಹೊಟ್ಟೆ ಸೇರುತಿತ್ತು. ಆದರೆ ಅದರಿಂದ ಅವರ ಅನ್ಯೋನ್ಯತೆಗೇನೂ ತೊಂದರೆ ಬಂದಿರಲಿಲ್ಲ. ಎಲ್ಲಿಯವರೆಗೆಂದರೆ, ಒಂದು ದಿನ ಊರು ತಿರುಗುವ ಜೋಗಿಯೊಬ್ಬನ ಭೇಟಿಯಾಗುವ ತನಕ...


Image Source: Art and crafts school US












         ಒಂದು ಸಂಜೆ ಹೆಂಡದಂಗಡಿಯಲ್ಲಿ ಜೋಗಿಯ ಮಾತುಕತೆ ನಡೆದಿತ್ತು. ಮಾತಿನ ಮಧ್ಯೆ ಅವನು, "ಹೆಣ್ಣು ಬರೀ ಹೆಣ್ಣೆಂದು ನಂಬಬೇಡಿ. ಅವಳಲ್ಲಿ ಮೂವತ್ತಾರು ಕಪಟ ಗುಣಗಳಿವೆ. ಸಮಯ ಬಂದರೆ ಹೆಣ್ಣು ಅದನ್ನು ಉಪಯೋಗಿಸುತ್ತಾಳೆ. ಎಂದು, ಯಾವುದಕ್ಕೆ, ಹೇಗೆ ಇವುಗಳನ್ನು ಬಳಸುತ್ತಾಳೋ ಯಾರು ಕಾಣರು" ಎಂದ. ನಮ್ಮ ರೈತನ ತಲೆಗೆ ಇದು ಬಲವಾಗಿ ನಾಟಿತು. ಸೀದಾ ಮನೆಗೆ ಬಂದ. ಹೆಂಡತಿಯ ಮುಂದೆ ನಿಂತು ಜೋಗಿ ಹೇಳಿದ ಮಾತುಗಳನ್ನ ತಿಳಿಸಿದ ಮತ್ತು ನಿನ್ನ ಮೂವತ್ತಾರು ಗುಣಗಳನ್ನು ತೋರಿಸು ಎಂದ. ಪಾಪ, ಹೆಂಡತಿಗೆ ತಲೆ-ಬುಡ ಅರ್ಥವಾಗಲಿಲ್ಲ. ಇಂಥದನ್ನು ತಾನೆಂದೂ ಕೇಳಿದ್ದಿಲ್ಲ ಎಂದಳು. ಇವನು ಕೇಳಲೇ ಇಲ್ಲ. ಅನುನಾಯಿಸಿದ, ಗದರಿದ. ಯಾವುದೂ ಕೆಲಸ ಮಾಡದಾಗ ನಾಲ್ಕು ಬಾರಿಸಿದ. ಹೆಂಡತಿ ಹೈರಾಣಾದಳು.

ಇದು ಮಾರನೆಯ ದಿನವೂ ಮುಂದುವರಿಯಿತು. ಸಂಶಯ ಭೂತ ಒಮ್ಮೆ ಒಳಹೊಕ್ಕಿತೆಂದರೆ, ಅದನ್ನು ಹೊರಹಾಕುವುದು ಬಲು ಕಷ್ಟ. ಅದು ಒಳ ಬರದಂತೆ ನೋಡಿಕೊಳ್ಳುವುದೇ ಒಳಿತು. ಹೀಗೆ ಜೋಗಿಯ ಮಾತೆಂಬ ಭೂತ ನಮ್ಮ ಈ ಸುಖಿ ಸಂಸಾರವನ್ನು ದುಃಖಿಯನ್ನಾಗಿ ಮಾಡಿತು. "ನಿನ್ನ ಮೂವತ್ತಾರು ಗುಣ ತೋರಿಸುವ ತನಕ ನಾನು ನಿನ್ನೊಂದಿಗೆ ಸುಖವಾಗಿರಲಾರೆ" ಎಂದ ಪತಿರಾಯ. ಈಗ ಹೆಂಡತಿ ಎಚ್ಚರಗೊಂಡಳು. ಹೇಗಾದರೂ ಇವನ ಮೂರ್ಖತನಕ್ಕೆ ಮದ್ದೆರೆಯಬೇಕು ಎಂದು ಯೋಚಿಸತೊಡಗಿದಳು.

ಒಂದೆರಡು ದಿನ ಕಳೆದಿರಬಹುದು. ಮಧ್ಯಾಹ್ನದ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೊರಟಿದ್ದಳು. ದಾರಿಯಲ್ಲಿ ಸಣ್ಣ ಕೊಳದ ತುಂಬಾ ಮೀನಿರುವುದು ಕಂಡಿತು. ಚಕ್ಕನೆ ಅವಳಿಗೊಂದು ಉಪಾಯ ಹೊಳೆಯಿತು. ನೀರಿನ ಮಡಕೆ ತುಂಬಾ ಮೀನು ಹಾಕಿಕೊಂಡು ತಮ್ಮ ಹೊಲಕ್ಕೆ ಹೋದಳು.

ಮರದ ಕೆಳಗೆ ಸಣ್ಣದೊಂದು ಗುಂಡಿ ತೋಡಿ ತಂದ ನೀರು, ಮೀನು ಸುರಿದು, ಅಣತಿ ದೂರದಲ್ಲಿ ಬುತ್ತಿ ಇಟ್ಟು ಗಂಡನನ್ನು ಕರೆದಳು. ಗಂಡ ಬರುತ್ತಿರುವಂತೆ, ಮೀನು ಕಂಡ. "ಅರೆ! ಇದೇನು, ಇಂದು ಇಲ್ಲಿ ಮೀನು" ಎಂದು ಹೆಂಡತಿಯನ್ನು ಕರೆದು ತೋರಿಸಿದ. ಅವಳು ಏನೂ ಗೊತ್ತಿಲ್ಲದವಳಂತೆ ನೀರಿನ ಮಡಕೆಯಲ್ಲಿ ಮೀನು ಹಿಡಿದು ತುಂಬಿಕೊಂಡಳು. ಗಂಡ ಸಂಜೆಯ ಉಟಕ್ಕೆ ಮೀನು ಹುರಿಡಿಡುವಂತೆ ಹೇಳಿದ.

ಹುಡುಗಿ ಮೀನು ಕರಿದು, ಅಡುಗೆ ಮನೆಯ ಅಟ್ಟದ ಮೇಲೆ ಬಚ್ಚಿಟ್ಟಳು. ಗಂಡ ಎಂದಿನಂತೆ ಸಾರಾಯಿ ಅಂಗಡಿಗೆ ಹೋಗಿ ಮೀನಿನ ಉಟಕ್ಕೆ ತಯಾರಾಗಿ ಮನೆಗೆ ಬಂದ. ತಟ್ಟೆಗೆ ಬಿದ್ದದ್ದು ಬರೀ ಬೇಳೆ,ತರಕಾರಿ ಮಾತ್ರ! ಇವನ ಪಿತ್ತ ನೆತ್ತಿಗೇರಿತು. "ಮೀನು ಎಲ್ಲಿ?" ಎಂದರೆ, "ಯಾವ ಮೀನು?" ಎಂದಳು ಹೆಂಡತಿ. ಮಾತಿಗೆ ಮಾತು ಬೆಳೆಯಿತು. ಗಂಡ ಕೈ ಎತ್ತಿದ. ಹೆಂಡತಿ ಎಂದಿಗಿಂತ ಜೋರಾಗಿ ಬೊಬ್ಬೆ ಹೊಡೆದಳು. ನೆರೆಕೆರೆಯವರು ಒಟ್ಟಾದರು. ಇವ ಪಾಪ, ಇದ್ದ ಸಂಗತಿ ತಿಳಿಸಿದ. ಕೇಳಿದ ಮಂದಿ ಬಿದ್ದು ಬಿದ್ದೂ ನಕ್ಕರು. "ಮಾವಿನಮರದ ಕೆಳಗೆ ಹೊಂಡ ಎಂದರೇನು? ಅದರಲ್ಲಿ ಭರ್ತಿ ಬಾಳೇಮೀನು ಎಂದರೇನು? ಹಗಲಿನಲ್ಲಿಯೂ ಕುಡಿದು ಕಂಡಿರಬೇಕು" ಎಂದರು. ಕಾರಣವಿಲ್ಲದೆ ಹೂವಿನಂಥ ಹುಡುಗಿಯ ಮೇಲೆ ಕೈಮಾಡುತ್ತೀಯಾ? ಎಂದು ಮೈ ಪುಡಿಯಾಗುವಷ್ಟು ಬಡಿದರು. ನಾಳೆ ಅವರ ತವರಿಗೆ ಹೇಳಿಕಳಿಸುತ್ತೇವೆ ಎಂದು ಹೆದರಿಸಿ ಹೊರಟುಹೋದರು.

ಅಂಗಳದಲ್ಲಿ ನರಳುತ್ತಾ ಬಿದ್ದವನನ್ನು ಆಸರೆ ಇತ್ತು ಮನೆ ಒಳಗೆ ಕರೆತಂದಳು ಹೆಂಡತಿ. ಬಿಸಿನೀರಿನಲ್ಲಿ ಬಟ್ಟೆ ಅದ್ದಿ ಶಾಖ ಕೊಟ್ಟಳು. ಗಾಯಗಳಿಗೆ ಮುಲಾಮು ಹಚ್ಚಿದಳು. ಮುಂದೆ ತಟ್ಟೆ ಇಟ್ಟು ಬಿಸಿಬಿಸಿ ಅನ್ನ, ಸಾರು, ಹುರಿದ ಮೀನು ಬಡಿಸಿದಳು. ಅಚ್ಚರಿಯಿಂದ ಕಣ್ಣು ಕಣ್ಣು ಬಿಟ್ಟ ಗಂಡನನ್ನು ನಸುನಗುತ್ತಾ ನೋಡಿ, "ಮೂವತ್ತಾರು ಗುಣಗಳಲ್ಲಿ ಇದು ಒಂದನೆಯದು. ಉಳಿದವುಗಳನ್ನು ನೀನು ಬೇಕೇ ಬೇಕೆಂದರೆ ಕಾಲಕ್ರಮೇಣ ತೋರಿಸುತ್ತೇನೆ. ಇರಲಿ, ಹೇಗಿತ್ತು ಮೊದಲನೆಯದು, ಖುಷಿಯಾಯಿತೆ? ಊಟ ಮಾಡಿದ ನಂತರ ಹೇಳುವಿಯುವಂತೆ" ಎಂದಳು.


Image Source: National Geographic magazine




                                                                              ಇದು ಒಂದು ಚೆಂದದ ವಾರ್ಲೀ ಕಥೆ. ವಾರ್ಲೀ ಬುಡಕಟ್ಟು ಜನಾಂಗದಲ್ಲಿ ಹೆಣ್ಣಿಗೆ ಗೌರವ ಸ್ಥಾನವಿದೆಯಂತೆ ಅಥವಾ ಇತ್ತಂತೆ. ಅವರಲ್ಲಿ ಮಾತ್ರವಲ್ಲ, ಭಾರತೀಯ ಸಂಸ್ಕ್ರತಿಯಲ್ಲೇ ಹೆಣ್ಣನ್ನು ದೇವತೆ, ಅವಳಿಂದಲೇ ಕುಟುಂಬ, ಅವಳೇ ದೇವತೆ ಎನ್ನುತ್ತಿದ್ದ ಕಾಲವೂ ಒಂದಿತ್ತಲ್ಲ!!? 

CLICK HERE