Friday 2 December 2016

'ತುಲಸಿ'ಯಾಗುವ ಭಾಗ್ಯ ಲಭಿಸಲಿ!

ಸುಮಾರು ೧೫-೧೬ನೆಯ ಶತಮಾನದ ಸಂತ ಕವಿ, ಶ್ರೀರಾಮಚಂದ್ರನ ಪರಮ ಭಕ್ತಶ್ರೀ ತುಲಸೀದಾಸ ಗೋಸ್ವಾಮಿ.



ಶ್ರೀರಾಮಚಂದ್ರನನ್ನು ಪ್ರೀತಿಸಿ, ಧ್ಯಾನಿಸಿ, ಬೇಡಿ, ಕಾಡಿ, ಹೆದರಿಸಿ ತನ್ನ 'ವಿನಯ ಪತ್ರಿಕಾ' ಎಂಬ ಮಹಾಕೃತಿಯ ಮೇಲೆ ಶ್ರೀರಾಮಚಂದ್ರನೇ ಸ್ವಯಂ ಸ್ವೀಕೃತಿಯ ಹಸ್ತಾಕ್ಷರ ಹಾಕುವಂತೆ ಮಾಡಿದವನು. ಶ್ರೀರಾಮಚರಿತ ಮಾನಸ, ತುಲಸಿ ರಾಮಾಯಣ ಎಂದೇ ಜನಪ್ರಿಯವಾಗಿರುವ ಮೇರುಕೃತಿಯ ಕರ್ತನೀತ. ಇಂಥ ಮಹಾಸಂತನ ಬದುಕಿನ ಒಂದು ಘಟನೆ ಇದು ಎನ್ನುತ್ತಾರೆ. ಭಾವದಲ್ಲಿಯೇ ಸಂಪೂರ್ಣ ಮುಳುಗಿದ ತುಲಸಿಯನ್ನು ಭಗವಂತನ ದಾಸನಾಗಿ ಪರಿವರ್ತಿಸಿದ ಕಥೆ ಇದು.


ANANDJOSHI9.BLOGSPOT.IN
Image have all standard licence belongs to Concerned person. Copying is purely offensive.
ತುಲಸಿ ದಾಸರ ವಿವಾಹ 'ರತ್ನಾವಲೀ' ಎಂಬ ಸುಂದರ ಕನ್ಯೆಯೊಂದಿಗೆ ನಡೆಯಿತಂತೆ. ಆ ಕ್ಷಣದಿಂದ ತುಲಸಿ ಎಂಬ ಯುವಕ ಅಕ್ಷರಶಃ "ರತ್ನಾವಲೀ" ದಾಸನಾದ. ಒಂದು ದಿನವೂ ಅವಳಿಂದ ಆಗಲಿರಲಾಗದ ಮೋಹದ ಪರೆಯೊಂದು ಅವನನ್ನು ಕವಿಯಿತು.

ಹೀಗಿರಲು ಒಂದು ದಿನ ತುಲಸಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ರತ್ನಾವಲಿಗೆ ತವರಿಗೆ ಹೋಗಬೇಕಾದ ತುರ್ತು ಪರಿಸ್ಥಿತಿ ಬಂತು. ಹಾಗೇ ಪತಿಗೆ ತಿಳಿಸದೇ ಹೊರಟು ಹೋದಳು. ಸಂಜೆ ಮನೆಗೆ ಮರಳಿದ ತುಲಸಿಗೆ ಪತ್ನಿ ಇಲ್ಲದ್ದು ತಿಳಿಯಿತು. ರಾತ್ರಿ "ಪೂರ್ತಿ ಅವಳನ್ನು ಆಗಲಿರಬೇಕಾದ ಯೊಚನೆಯಿಂದಲೇ ಕಂಗಾಲಾಗಿ ಹೋದನವನು. ಸುರಿವ ಮಳೆ, ಗುಡುಗು, ಸಿಡಿಲುಗಳ ಆರ್ಭಟವನ್ನು ಲೆಕ್ಕಿಸದೆ ಮಾವನ ಮನೆಯತ್ತ ಓಡುತ್ತಾ ಹೋದ. ಅದರ ಹಾದಿಯಲ್ಲಿ ನದಿ ತುಂಬಿ ಹರಿಯುತಿತ್ತು.
ಪ್ರವಾಹದಲ್ಲಿ ನದಿ ದಾಟುವುದೆಂತು? ಒಬ್ಬನೇ ಒಬ್ಬ ಅಂಬಿಗನ ದೋಣಿ ಕಾಣುತ್ತಿರಲಿಲ್ಲ. ಈಗಂತೂ ತುಲಸಿ ಹುಚ್ಚನಂತಾದ. ಅತ್ತಿತ್ತ ಅಲೆದಾಡಿ ಯಾವುದಾದರೂ ಉಪಾಯ ಕಾಣುವುದೋ ಎಂದು ಹುಡುಕುತ್ತಿದ್ದವನಿಗೆ ಹಲಗೆಯ ತುಂಡಿನಂತಥದ್ದೇನೋ ಕಂಡಿತು. ಹಿಂದು ಮುಂದು ಆಲೋಚಿಸದೇ ತುಲಸಿ ಅದರ ಮೇಲೆ ಬೋರಲು ಬಿದ್ದ.  ಕೈಗಳನ್ನೇ ಹರಿಗೋಲಿನಂತೆ ಉಪಯೋಗಿಸುತ್ತಾ ಆಚೆ ದಡ ಸೇರಿದ.

ಸೇರಿದವನೇ ರತ್ನಾವಾಲಿಯ ಮನೆಯತ್ತ ಓಡಿದ. ಸರಿ ರಾತ್ರಿಯಾಗಿತ್ತು. ಮನೆಯಲ್ಲಿ ಒಂದೇ ಒಂದು ದೀಪವೂ ಉರಿಯುತ್ತಿರಲಿಲ್ಲ. ಬಾಗಿಲು ತಟ್ಟಿದರೆ ಉತ್ತರವಿಲ್ಲ. ಮನೆಗೊಂದು ಸುತ್ತು ಬಂದ. ತಾರಸಿಯಿಂದ ಹಗ್ಗವೊಂದು ನೇತಾಡುತ್ತಿರುವುದು ಕಂಡಿತು. "ಆಹಾ! ನಾನು ಬರುವುದನ್ನು ನಿರೀಕ್ಷಿಸಿ ನನ್ನ ಮನದನ್ನೆ ಹಗ್ಗ ಕಟ್ಟಿಟ್ಟಿದ್ದಾಳೆ" ಎಂದುಕೊಂಡು ತಾರಸಿ ಹತ್ತಿ ತೆರೆದ ಕಿಟಕಿಯ ಮೂಲಕ ಹೆಂಡತಿಯ ಕೋಣೆ ಸೇರಿದ.

ಗಾಢನಿದ್ದೆಯಲ್ಲಿದ್ದ ಪತ್ನಿಯನ್ನು ಎಬ್ಬಿಸಿದ. ಇವನ ಅವತಾರ ಕಂಡು ಅವಳು ದಂಗಾದಳು. ಹಗ್ಗದ ಕಥೆ ಕೇಳಿ, "ತಾನು ಹೇಗೆ ಮಾಡಿದ್ದೇ ಇಲ್ಲ" ಎಂದಳು. " ನಿಮ್ಮ  ಈ ನಶ್ವರ ದೇಹದ ಮೇಲಿನ ಮೋಹದ ನೂರರ ಒಂದು ಪಾಲು ಶ್ರೀರಾಮಚಂದ್ರನ ಚರಣಾರವಿಂದಗಳಲ್ಲಿ ಇಟ್ಟರೆ ಭವದಿಂದಲೇ ಮುಕ್ತಿ ಸಿಗುತ್ತಿತ್ತು ಎಂದಳು. ಅವಳ ಈ ಒಂದು ಮಾತು ತುಲಸಿಯ ಮನದ ಕಾವಳ ಹರಿಸಿತು. ಮೋಹ ಕಳೆಯಿತು. ತುಲಸಿ, ಶ್ರೀರಾಮಚಂದ್ರನ ದಾಸನಾದ. ಅವನ ಭಕ್ತಿ ಕಾವ್ಯಧಾರೆಯಾಯಿತು. ಜಗತ್ತು ಇಂದೂ ಸ್ಮರಿಸುವ ಸಂತರ ಪಾಲಿಗೆ ಸೇರ್ಪಡೆಯಾದ. ರತ್ನಾವಲಿಯ ಮಾತೆಂಬ ಪರುಷಮಣಿಯ ಸಂಪರ್ಕದಿಂದ ಕಬ್ಬಿಣ ಹೊನ್ನಾಗಿ ಪರಿವರ್ತನೆಯಾಯಿತು.

ಅಸಲಿಗೆ ಅವನು ತೆಪ್ಪವೆಂದು ಉಪಯೋಗಿಸಿದ್ದು ಕೊಳೆತ ಶವವಾಗಿತ್ತು. ತಾರಸಿಯಿಂದ ನೇಲುತ್ತಿದ್ದ ಹಗ್ಗ ಹಾವಾಗಿತ್ತು.


ANANDJOSHI9.BLOGSPOT.IN
Image have all standard licence belongs to Concerned person. Copying is purely offensive.
'ಸಂಸಾರವೆಂಬ ಸಾಗರದಲ್ಲಿ ಸಾಸಿವೆಯಷ್ಟು ಸುಖವಾದರೆ, ದುಃಖ ಸಾಗರದಷ್ಟು' ಎನ್ನುವ ಮಾತಿದೆ. ಈ ಸುಖ-ದುಃಖಗಳ ಮಧ್ಯದ ಗೆರೆ ಕಂಡವನಿಗೆ ಮಾಯೆ ಹಿಂಗುತ್ತದೆ. ಭವ ಕಳೆಯುತ್ತದೆ. ಹೀಗೆ ಕಳೆದುಕೊಂಡವರು ಭಾರತವೆಂಬ ಪುಣ್ಯಭೂಮಿಯಲ್ಲಿ ಕೋಟಿ ಸಂಖ್ಯೆಗಳಲ್ಲಿ ಇದ್ದರು, ಇದ್ದಾರೆ ಹಾಗೂ ಮುಂದಕ್ಕೂ ಬರುವವರಿದ್ದಾರೆ.

( Copyright © 2015-16 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 

 anandjoshi9@live.com 
+91-9483998343

 Account ID: pub-2871201476498332 Client ID: ca-pub-2871201476498332

CLICK HERE