Saturday 4 April 2020

ಹುಟ್ಟು ಗುಣ...ಹೋಗದು

ಒಬ್ಬನಿಗೆ ಅಸಾಧ್ಯ ಕೋಪದ ರೋಗ ಇತ್ತು. 

ಕೋಪ, ಅಸೂಯೆ, ಮಾತ್ಸರ್ಯಗಳೆಲ್ಲವೂ ಅತೃಪ್ತ ಜೀವದ ಹೊರಮುಖಗಳು. 

ಒಂದು ವಿಧದ ರೋಗ ಇದು ಇಂಥ ರೋಗಿಗೆ ಮದುವೆಯಾಯಿತು. 

ಹೆಂಡತಿಯೊಂದಿಗೂ ಈ ಕೋಪ ಪ್ರದರ್ಶನವಾಯಿತು. 

ಒಂದು ದಿನ ಬಂದ ಕೋಪದಲ್ಲಿ ಹೆಂಡತಿಯನ್ನೆತ್ತಿ ಬಾವಿಗೆ ಹಾಕಿದ. 

ಹೆಂಡತಿ ಸತ್ತು ಹೋದಳು. 
ಈಗ ಇವನಿಗೆ ಎಚ್ಚರವಾಯಿತು. 

ಪಶ್ಚಾತಾಪದಿಂದ ಊರಿಗೆ ಬಂದಿದ್ದ ಮುನಿಗಳೆದುರುಗೆ ನಿಂತ. 

ತಾನು ಮಾಡಿದ ಮಹಾಪಾಪಗಳನ್ನು ಅರಿಹಿ ತನಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ 
ಒಂದು ಅವಕಾಶವಾಗಿ ಸನ್ಯಾಸ ದೀಕ್ಷೆ ನೀಡಬೇಕೆಂದು ಬೇಡಿದ.

ಮುನಿಗಳು, "ಮಗು ಸನ್ಯಾಸ ಸುಲಭವಲ್ಲ. 
ವಿವಸ್ತ್ರನಾಗಿ, ಬೇಡಿ ತಂದ ಆಹಾರವನ್ನು ಮಾತ್ರ ಸ್ವೀಕರಿಸಿ, 
ನೆಲದ ಮೇಲೆ ಮಲಗಿ ಬದುಕು ಕಳೆಯಬೇಕು" ಎಂದರು. 

ಇವನು ಕೂಡಲೇ ಉಟ್ಟವಸ್ತ್ರಗಳನ್ನು ಬಿಚ್ಚಿ ಎಸೆದ. 
"ಉಳಿದದ್ದನ್ನು ಪಾಲಿಸಿ ತೋರಿಸುತ್ತೇನೆ, ನೀಡಿ ದೀಕ್ಷೆ" ಎಂದ. 

ಮುನಿಗಳು ಬೆರಗಾದರು. 
"ಅರೇ! ಎಂಥ ದೃಢ ಸಂಕಲ್ಪ" ಎಂದುಕೊಂಡು ದೀಕ್ಷೆ ನೀಡಿದರು. 
"ಶಾಂತಿನಾಥ" ಎಂದು ನಾಮಕರಣ ಮಾಡಿದರು.


WWW.KARTAVYAA.BLOGSPOT.IN
Image may be subject to copyright.
ಶಾಂತಿನಾಥ ಕಠಿಣ ಬದುಕನ್ನು ಆರಿಸಿಕೊಂಡ. 

ಬರಿಗಾಲಿನಲ್ಲಿ, ಕಲ್ಲುಮುಳ್ಳುಗಳನ್ನು ಲೆಕ್ಕಿಸದೇ ನಡೆದ. 

ಎರಡು ದಿನಕ್ಕೊಮ್ಮೆ ಆಹಾರ ಸೇವಿಸಿದ. 
ಒಂದೇ ಪ್ರಹರ ನಿದ್ದೆ ಮಾಡಿದ. 

ಹೀಗೆ ಇವನ ತ್ಯಾಗ ಜೀವನದ ಕಥೆ ರಾಜ್ಯದಲ್ಲೆಲ್ಲಾ ಜನಜನಿತವಾಯಿತು. 

ಸ್ವತಃ ರಾಜಧಾನಿಯಿಂದ ಮಹಾರಾಜನೇ ಇವನನ್ನು ಕಾಣಲು ಬಂದ. 

ಇವನ ಖ್ಯಾತಿಯನ್ನು ಇವನ ಬಾಲ್ಯ ಮಿತ್ರನೂ ಕೇಳಿದ. 

ಸಿಟ್ಟಿನ ಮೊಟ್ಟೆಯಂತಿದ್ದ ಇವನು ಹೀಗಾದದ್ದು ಹೇಗೆ? 
ಎಂಬ ಸಂದೇಹ ಬಂತವನಿಗೆ. 

ಏನಿದ್ದರೂ ಕಣ್ಣಾರೆ ನೋಡಿದರೆ ಸೈ, ಎಂದುಕೊಂಡು ಇವನಿರುವಲ್ಲಿಗೆ ಬಂದ.


ಇವನಿಗೆ ನಮಸ್ಕರಿಸಿ. 
"ಸ್ವಾಮಿ, ತಮ್ಮ ನಾಮಧೇಯವೇನು?" ಎಂದು ಪ್ರಶ್ನಿಸಿದ. 
"ಶಾಂತಿನಾಥ" ಎಂದ ತ್ಯಾಗಿ. 
ಗೆಳೆಯ ಮತ್ತೆ "ಸ್ವಾಮಿ ಸರಿಯಾಗಿ ಕೇಳಿಸಲಿಲ್ಲ. 
ಮತ್ತೊಮ್ಮೆ ಕೇಳುತ್ತಿದ್ದೇನೆ. ನಿಮ್ಮ ಹೆಸರೇನು?" ಎಂದ.


ಶಾಂತಿನಾಥ ಮುಖದಲ್ಲಿ ಅಶಾಂತಿಯ ಗೆರೆಗಳು ಮೂಡಿದವು. 

ಮೊತ್ತಮೊದಲನೆಯದಾಗಿ ತನ್ನಂಥ ಜಗತ್ಪ್ರಸಿದ್ಧನ ಹೆಸರು 
ಕೇಳಿದ್ದೇ ಮಹಾಪರಾಧವಾಗಿತ್ತು. 

ಎರಡನೆಯ ಬಾರಿ ಕೇಳಿದ್ದು ಮತ್ತೂ ದೊಡ್ಡ ಅಪರಾಧವಾಗಿತ್ತು. 

ಎತ್ತರದ ದ್ವನಿಯಲ್ಲಿ "ಮೂರ್ಖ, ಇಡೀ ರಾಜ್ಯವೇ ಹಾಡಿ ಹೊಗಳುತ್ತದೆ ನನ್ನನ್ನು. 
ನೀನು ಹೆಸರು ಕೇಳುತ್ತಿರುವಿಯಲ್ಲಾ.
ಶಾಂತಿನಾಥ ನನ್ನ ಹೆಸರು" ಎಂದ.

ಬಾಲ್ಯಮಿತ್ರ ನಸುನಗುತ್ತಾ, 
"ಗೆಳೆಯಾ, ಹೆಸರು ಬದಲಾಗಿದೆ,ರೂಪ,ವೇಷ ಬದಲಾಗಿದೆ. 
ಆದರೆ ಮೂಲ ಸ್ವಭಾವ ಬದಲಾಗಿಲ್ಲ. 
ಅದೇ ಅಹಂಕಾರ,ಸಿಟ್ಟು,ಸೆಡವು ಅದೇ ಕುದಿಯುತ್ತಿರುವ ತಿರಸ್ಕಾರ. 
ಅಶಾಂತಿನಾಥರೆಂದೂ ಶಾಂತಿನಾಥರಾಗಲು ಸಾಧ್ಯವೇ?" 
ಎಂದು ಎದ್ದು ಹೋರಟುಹೋದ.


WWW.KARTAVYAA.BLOGSPOT.IN
IMAGE MAY BE SUBJECT TO COPYRIGHTS
ಇದೊಂದು ದೃಷ್ಟಾಂತ ಕಥೆ. 

ಇದರ ಒಳಹೊಕ್ಕು ನೋಡಿದರೆ 'ಇದು ನಾವೇ' ಎಂದು ಅರ್ಥವಾಗುತ್ತದೆ. 

ಯಾವ ಸಿಟ್ಟಿಗೆ ತಲೆಬಾಗಿ ಹೆಂಡತಿಯನ್ನು ಬಾವಿಗೆ ತಳ್ಳಿದನೋ, 
ಅದೇ ಸಿಟ್ಟಿನಿಂದ ಅವನು ವಿವಸ್ತ್ರನಾದ. 
ಅದೇ ಸಿಟ್ಟಿನಿಂದ ಆಹಾರ ತ್ಯಜಿಸಿದ, ದೇಹ ದಂಡಿಸಿದ. 
ಇದ್ಯಾವುದರಲ್ಲೂ ಪ್ರಾಯಶ್ಚಿತ್ತದ ಅಂಶವಿರಲಿಲ್ಲ. 

ಇದರ ಆಂತರ್ಯ ತಿಳಿಯದ ಮಂದಿ ಇವನ ಹೊರರೂಪಕ್ಕೆ ಜಯಕಾರ ಹಾಕಿದರು. 
ಮಂಗ ಮಧ್ಯ ಕುಡಿದಂತಾಯಿತು. 
ತನಗಿಂತ ಮೇಲಿನವನಿಲ್ಲ ಎಂಬ ಅಹಂಕಾರ ಸೇರಿಕೊಂಡಿತು. 
ಆದರೆ ಮೂಲ ಸ್ವಭಾವದಲ್ಲಿ ಎನಿತೂ ಬದಲಾವಣೆಯಾಗಿರಲಿಲ್ಲ.


ಪಶ್ಚಾತಾಪ ಎಂದರೆ, ಯಾವ ಸ್ವಭಾವದಿಂದ ತನ್ನಿಂದ ತಪ್ಪಾಯಿತೋ 

ಆ ಸ್ವಭಾವವನ್ನೇ ಸಮೂಲವಾಗಿ ಕಿತ್ತೊಗೆಯುವುದು. 

ಕೋಪ ಅಸೂಯೆ, ಮಾತ್ಸರ್ಯ ಮೇರೆ ಮೀರಿದ ಕಾಮನೆ 
ಇದೆಲ್ಲವೂ ಸುಖದ ಹಾದಿಯ ಮುಳ್ಳುಗಳು. 
ಇವುಗಳಿಂದ ಬಿಡುಗಡೆ ಹೊಂದುವುದೇ ಪ್ರಾಯಶ್ಚಿತ್ತ ಇಂದು 
ನಿನ್ನೆಯ ತಪ್ಪುಗಳ ನಿಂತಿದೆ ಎನ್ನುವ ಮಾತಿದೆ. 
ಕಾಲನಲ್ಲಿ ಸರಿದು ಹೋದ ಬದುಕಿನ ಅನುಭವಗಳನ್ನು 
ಮತ್ತೆ ಅನುಭವಿಸಿ ನೋಡುತ್ತಾ ಯಾವುದರಿಂದ ತನ್ನವರಿಗೆ ಹಿತವಾಗಿದೆಯೋ 
ಅದನ್ನು ಮರಳಿಸುತ್ತಾ, ಅಹಿತವಾಗಬಹುದಾದುದನ್ನು 
ಮರುಕಳಿಸದಂತೆ ನೋಡಿಕೊಳ್ಳುವುದೇ ಹೊಸ ಹುಟ್ಟಿಗೆ ನಾಂದಿ.


ಬದುಕೊಂದು ಅನಂತ ಯಾತ್ರೆ,ಇದರೆ ಹೆಜ್ಜೆ ಗುರುತುಗಳು ಲೆಕ್ಕವಿಲ್ಲದವು. 

ಅವು ಬರೀ ಗುರುತುಗಳು ಮಾತ್ರ. 

ಅವುಗಳಲ್ಲಿ ಮರಳಿ ಹೆಜ್ಜೆ ಇಡಲಾಗದು. 

ಆದರೆ, ಅವುಗಳ ಆಳವರಿತು, ಮುಂದಿನ ಹೆಜ್ಜೆಗಳನ್ನು ರೂಪಿಸಬಹುದು. 

ಈ ರೂಪಾಂತರದ ಮೊದಲ ಹೆಜ್ಜೆಯೇ ಯುಗಾದಿ. 

ಬೇವು ಬೆಲ್ಲಗಳ ಮಿಶ್ರಣವಾದ ಬದುಕನ್ನು ಬೇವು ಬೆಲ್ಲವಾಗಿಯೇ ಕಂಡು, 

ಬೆಲ್ಲವನ್ನು ಖುಶಿಯಾಗಿ ಮೆರ್ದಂತೇ ಜೀವನದಲ್ಲೂ ಬೆಲ್ಲದ 

ಸಿಹಿಯನ್ನು ಸವಿಯುವುದೇ ಯುಗದ ಆದಿ. 

ಜೀವನ ಅನಂತ ಯಾತ್ರೆಯಲ್ಲಿ ಪರಿಷ್ಕರಿಸಿದ ಮೊದಲ ಹೆಜ್ಜೆ ಇದು.

"ಜಗತ್ತು ಇಡೀ ಅಜ್ಞಾನದ ಆಳದಲ್ಲಿ ಮಲಗಿ ನಿದ್ದೆ ಹೋಗಿರುವಾಗ, ಎಚ್ಚೆತ್ತಿರುವವನೇ ಜ್ಞಾನಿ,ತಿಳಿದವ. ಅಂಥವನೇ "ಮುಕ್ತ". ಎಚ್ಚರಗೊಳ್ಳುವ ಪ್ರಯತ್ನವೇ ಹೊಸ ಮನ್ವಂತರಕ್ಕೆ ನಾಂದಿ"

Click here to LIKE US

CLICK HERE