Saturday 18 October 2014

ಮನುಕುಲದ ಕಾಳಜಿಯೇ ಜೀವ ವಿಕಾಸದ ಕುರುಹು..ಭಾಗ-೧



ಮಗಧದ ರಾಜಧಾನಿಯಾದ ರಾಜಗೃಹ ಹೊರಗಿರುವ ಚೈತ್ಯದಲ್ಲಿ ಗೌತಮ ಬುದ್ದ 

ಬಿಡು ಬಿಟ್ಟಿದ್ದ. ಪ್ರತಿದಿನ ಸಂಜೆ ಪ್ರವಚನ ನಡೆಸುತ್ತಿದ್ದ. ಮಂದಿ ಕಿಕ್ಕಿರಿದು 

ಸೇರುತ್ತಿದ್ದರು. ಹೀಗಿರುವಲ್ಲಿ ವೈಶಾಲಿಯಿಂದ ಬಂದ ವರ್ತಕರ ತಂಡದವರಿಗೆ 

ಬುದ್ದದೇವ ಇಲ್ಲಿರುವ ವಿಷಯ ತಿಳಿಯಿತು. ವ್ಯಾಪಾರಕ್ಕೆಂದು ಬಂದವರು ಸಂಜೆ 

ಮುನ್ನ ಕೆಲಸ ಮುಗಿಸಿ ಬುದ್ದನನ್ನು ಕೇಳಲು ಬರತೊಡಗಿದರು. ಒಂದು ವಾರ 

ಕಳೆಯಿತು. ವರ್ತಕ ತಂಡದ ಯಜಮಾನನಿಗೆ ಒಂದು ಸಂದೇಹ ಬಂತು. ಆ 

ಸಂದೇಹ ಅವನ ವೃತ್ತಿ ಆಧಾರಿತ ಚಿಂತನೆಯಿಂದ ಬಂದಿತ್ತು.





ಅವನು ಗೌತಮ ಬುದ್ದನ ಮುಂದೆ ತನ್ನ ಸಂದೇಹ ಮಂಡಿಸಿದ.- " ಭಗವಾನ್ ಇಷ್ಟು 

ಶ್ರಮ ಪಟ್ಟು ಪ್ರತಿದಿನ, ಇಷ್ಟು ಮಂದಿಗೆ ತಾವು ಕಂಡ ಸತ್ಯದ ಬಗ್ಗೆ ಇನ್ನಿಲ್ಲದಂತೆ 

ತಿಳಿಯಹೇಳುತ್ತೀರಿ. ಆದರೆ, ಇವರಲ್ಲಿ ಎಷ್ಟು ಮಂದಿಗೆ ತಾವು ಹೇಳುವ ಮಾತುಗಳು

ಅರ್ಥವಾಗುತ್ತವೋ ಎಂಬ ಸಂದೇಹ ನನಗೆ. ಒಂದು ವೇಳೆ ಒಂದಿಷ್ಟು 

ಅರ್ಥವಾಯಿತು ಎಂದುಕೊಂಡರು ಆ ತತ್ವಗಳ ಪಾಲನೆ ಎಷ್ಟು ಮಂದಿಯಿಂದ 

ಸಾಧ್ಯವಾಗುತ್ತದೆ? ಮತ್ತೆ ತಮ್ಮ ಹಾಗೆ ನಿರ್ವಾಣ ಹೊಂದುವ ಮಂದಿಯನ್ನು 

ಊಹಿಸಲೂ ಅಸಾಧ್ಯ. ಹಾಗಿರುವಾಗ ತಮ್ಮ ಈ ಶ್ರಮ ವ್ಯರ್ಥವಾಗುತ್ತಿದೆಯಲ್ಲ? 

ಇದರಿಂದ ತಮಗಾಗುವ ಲಾಭಾವಾದರೂ ಏನು?"






ಗೌತಮ ಬುದ್ಧ ನಸುನಗುತ್ತಾ " ತಾವು ವೈಶಾಲೀಯವರೆಂದು ಕಾಣುತ್ತದೆ 

ಅಲ್ಲವೇ?" ಎಂದು ಪ್ರಶ್ನಿಸಿದ. ವಣಿಕನ ಮುಖ ಇಷ್ಟಗಲವಾಯಿತು. "ಹೌದು , 

ಹೌದು. ನಾನು ವೈಶಾಲೀಯವ" ಎಂದುತ್ತರಿಸಿದ. ಬುದ್ಧದೇವ ಮತ್ತೆ 

"ರಾಜಗೃಹದಿಂದ ವೈಶಾಲಿಗೆ ಹೋಗುವ ದಾರಿ ಹೇಗೆ? ಒಂದೇ ದಾರಿಯೊ ಅಥವಾ 

ಹಲವು ದಾರಿಗಳಿವೆಯೋ? ಮತ್ತೆ ವೈಶಾಲಿ ಬಲು ಸುಂದರ ನಗರ ಎಂದು 

ಕೇಳಿದ್ದೇನೆ. ಹೌದೇನು?" ಎಂದು ಕೇಳಿದ. ವಣಿಕನಿಗೆ ತಾನು ಸಮಾಧಾನ 

ಬಯಸಿದ ಸಂದೇಹ ಮರೆತೇ ಹೋಯಿತು. ಬಲು ಉತ್ಸಾಹದಿಂದ ವೈಶಾಲಿಗೆ 

ಹೋಗುವ ಬೇರೆ ಬೇರೆ ದಾರಿಗಳು, ಆ ದಾರಿಯಲ್ಲಿ ಸಿಗುವ ನದಿ ತೊರೆಗಳು,

ದಟ್ಟ ಕಾನನದ ಹಸಿರು, ರಾಜಿ, ಮತ್ತೆ ವೈಶಾಲಿಯ ವೈಭವ , ಸೌಂದರ್ಯ 

ವರ್ಣಿಸತೊಡಗಿದ.. ಇವನ ಮಾತಿನ ಮೋಡಿಗೆ ಮರುಳಾದ ಮಂದಿ ಇವನ ಸುತ್ತ 

ಹಿಂಡುಗಟ್ಟಿ ನಿಂತರು. ಸುಮಾರು ಹೊತ್ತು ಹೀಗೆ ವರ್ಣಿಸಿದ ಅನಂತರ ವರ್ಣಿಕ, " 

ಆಹಾ! ಇಷ್ಟು ನನ್ನ ಮಾತುಗಳ ಮೂಲಕ ತೋರಿಸಬಹುದಾದ ವೈಶಾಲಿ ವೈಭವ .

 ಆದರೆ ನನ್ನನ್ನು ನಂಬಿ ... ನನ್ನ ಈ ಮಾತುಗಳಲ್ಲಿ ನೂರರಲ್ಲಿ ಒಂದು ಭಾಗ 

ನ್ಯಾಯವು ಈ ಸುಂದರ ನಗರದ ವರ್ಣನೆಯಾಗಲಿಲ್ಲ. ನೀವೆಲ್ಲರೂ 

ಒಮ್ಮೆಯಾದರೂ ನೋಡಲೇಬೇಕಾದ ನಗರವದು.. ಪ್ರಯತ್ನ ಪೂರ್ವಕವಾಗಿ 

ಒಮ್ಮೆ ನಮ್ಮೂರಿಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದೇನೆ" ಎಂದು ಮಾತು ಮುಗಿಸಿದ.






ನೆರೆದವರು ಚದುರಿ ಹೋದ ಅನಂತರ, ನಸುನಗುತ್ತಾ ಕುಳಿತಿದ್ದ ಬುದ್ಧ 

ಕಂಡ."ಅಯ್ಯಾ! ವಣಿಕಶ್ರೇಷ್ಟ, ಈ ವೈಶಾಲಿಯಂತೆಯೇ ಪರಮ ಪದ ನನ್ನ ತವರು,

 ಸೌಂದರ್ಯ, ಶಾಂತಿ, ಆನಂದದ ತವರು. ಒಮ್ಮೆಯಾದರೂ ಮಂದಿ ಅಲ್ಲಿಗೆ

ಹೋಗುವ ಪ್ರಯತ್ನವನ್ನಾದರೂ ಮಾಡಲಿ ಎಂದು ನನ್ನಾಸೆ. ಆದುದರಿಂದ ಇಲ್ಲಿಗೆ 

ಕರೆತರುವ ಹಾದಿ, ಮತ್ತೆ ಈ ನಗರಿಯ ವೈಭವದ ವರ್ಣನೆ ಮಾಡುತ್ತೇನೆ. 

ಪ್ರಯತ್ನಿಸುವವರು ಹೋಗುತ್ತಾರೆ. ಹೋಗಲಾಗವರಿಗೆ ಪ್ರಯತ್ನಿಸಿದವರಿಗೂ ಒಂದು

ಲಾಭವಾಗುತ್ತದೆ. ಇಂಥದ್ದೊಂದು ಇದೆ ಎಂಬ ವಿಷಯದ ಬೀಜ ಬೀಳುತ್ತದೆ. ಅವರ
 ಮಂದಂಗಳದಲ್ಲಿ ಮುಂದೆ ಎಂದಾದರೊಂದು ದಿನ ಅನುಕೂಲ ವಾತಾವರಣ 

ಸಿಕ್ಕಿದಂದು ಆ ಬೀಜ ಮೊಳಕೆಯೊಡೆಯಲೂಬಹುದು! ಆದ್ದರಿಂದ ಇಲ್ಲಿ

 ಎಲ್ಲವೂ ಲಾಭವೇ. ನಷ್ಟದ ಮಾತೆ ಇಲ್ಲ " ಎಂದ ಕರುಣಾಮಯಿ ಬುದ್ಧ...





ಈ ಜಗತ್ತಿನಲ್ಲಿ ಅದರದೇ ಆದ ನಿಯಮವಿದೆ. 

ಪ್ರತಿಯೊಂದು ಆ 
ನಿಯಮದಂತೆ  ನಡೆಯುತ್ತದೆ. 

ಮನುಷ್ಯನಿಗೂ ಇದೆ ನಿಯಮ

ಅನ್ವಯಿಸುತ್ತದೆ. ಒಳಿತು 

ಮಾಡಿದರೆ ಒಳಿತು, ಕೆಟ್ಟದ್ದು ಮಾಡಿದರೆ ಕೆಟ್ಟ ಫಲ. ಇದೆ ನಿಯಮ. ಆದುದರಿಂದ

ತಪ್ಪು ಉದ್ದೆಶಪುರ್ವಕವಾಗಿಲ್ಲದಾಗ ಕ್ಷಮೆಯಾಚಿಸುತ್ತಾ, ವಿಶ್ವಾಚೈತನ್ಯಕ್ಕೆ 

ಮೊರೆಹೋದರೆ ಫಲದ ತೀವ್ರತೆ ಕಡಿಮೆಯಾಗುವುದು. ಮಾತ್ರವಲ್ಲ, 

ಶಕ್ತಿಯು ವ್ಱದ್ಧಿಯಗುತ್ತದೆ ಎನ್ನುತ್ತಾರೆ ಬಲ್ಲವರು.....

No comments:

Post a Comment

CLICK HERE