Monday 20 October 2014

ಮನೋಭೂಮಿಕೆಯ ಎರಡು ವೈರುಧ್ಯಗಳು

"ಸರ್ವರಿಗೂ ದೀಪಾವಳಿಯ ಶುಭಾಶಯಗಳು......."













ಮಹಾಭಾರತದ ಸುಂದರ, ಮನೋಜ್ಞ ಕಥೆಯಿದು. ಕರ್ಣ ಸೂತಪುತ್ರ. ಆದರೂ

 ದಾನಕ್ಕೆ ಹೆಸರಾದವನು. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ 

ಇಂದ್ರನಿಗೆ ತನ್ನ ಸ್ವರ್ಣಕವಚವನ್ನು ದಾನ ನೀಡಿದ ಮಹಾನ್ ಜೀವ ಕರ್ಣ. ಸ್ವರ್ಣ 

ಕವಚ ದೇಹದಿಂದ ಬೇರೆಯಾದರೆ ಸಾವನ್ನು ಕೈಬೀಸಿ ಕರೆದಂತೆ ಎಂಬುದನ್ನು 

ತಿಳಿದೂ ಬೇಡಿದ್ದನ್ನು ನಿರಾಕರಿಸದೇ ನೀಡಿದ್ದ. ಇಂಥವನ ಬಗ್ಗೆ ಇದೆ ಈ ಕಥೆ.




ಒಮ್ಮೆ ಕರ್ಣ ಅಭ್ಯಂಗಕ್ಕೆಂದು ಚಿನ್ನದ ಪಾತ್ರೆಯಿಂದ ಎಣ್ಣೆ ಹಚ್ಚಿಕೊಳ್ಳುತ್ತಿದ್ದ. ಆಗ 

ಅಲ್ಲಿಗೆ ಒಬ್ಬ ಬ್ರಾಹ್ಮಣ ಬಂದ. "ಸ್ವಾಮೀ, ಮಗಳಿಗೆ ಮದುವೆ ಗೊತ್ತಾಗಿದೆ. ತೀರಾ 

ಬಡತನ. ಏನಾದರೂ ಸಹಾಯ ಮಾಡಬಹುದೇ?" ಎಂದ. ಕರ್ಣ ಕೂಡಲೇ

 ಕೈಯಲ್ಲಿದ್ದ ಚಿನ್ನದ ಬೋಗುಣಿಯನ್ನು ಬ್ರಾಹ್ಮಣನ ಕೈಯಲ್ಲಿಟ್ಟು ಬಿಟ್ಟ. "ಸ್ವಾಮೀ,

 ತಿಳಿದೋ ತಿಳಿಯದೆಯೋ ನೀಡುವ ಆತುರದಲ್ಲಿ ಎಡಗೈಯಿಂದ ದಾನ ಮಾಡಿದಿರಿ.

 ಎಡಗೈಯಿಂದ ನೀಡುವ ದಾನದಿಂದ ಸಕಲ ಸೌಭಾಗ್ಯಗಳೂ ಕ್ಷೀಣವಾಗುತ್ತವೆ 

ಎಂಬ ಮಾತಿದೆ. ನಿಮಗೆ ಇಂಥ ಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಹೇಳುತ್ತಿದ್ದೇನೆ" ಎಂದ.



ಕೂಡಲೇ ಕರ್ಣ, "ವಿಪ್ರೋತ್ತಮನೆ, ಮೈಗಂಟಿದ ಕೊಳೆಯಿಂದ ಬಿಡುಗಡೆ 

ಹೊಂದಲು ಅಭ್ಯಂಗಕ್ಕೆ ಸಿದ್ಧನಾಗುತ್ತಿದ್ದೆ. ಇದರೊಂದಿಗೆ ಮನಸ್ಸಿನಲ್ಲಿ 

ಉಳಿದಿರಬಹುದಾದ ಕೊಳೆಯನ್ನು ಹೋಗಲಾಡಿಸುವುದೆಂತು ಎಂದು ಚಿಂತಿಸುತ್ತಿದ್ದೆ.

 ಭೌತಿಕ ಸಿರಿ ಸಂಪತ್ತುಗಳೂ ನನ್ನವು ಎಂಬ ಪ್ರಜ್ಞೆ, ಆಧ್ಯಾತ್ಮಿಕ ಉನ್ನತಿಯ 

ಹಾದಿಯಲ್ಲಿನ ತೊಡರುಗಳು. ಆದುದರಿಂದ ಒಂದು ವೇಳೆ ನೀನೆಂದಂತೆ, 

ಎಡಗೈಯಲ್ಲಿ ದಾನ ಮಾಡುವುದರಿಂದ ಸಿರಿಸಂಪದಗಳು ಕ್ಷೀಣ ಯಾ 

ನಾಶವಾದರೂ ಅದರಿಂದ ತೊಂದರೆ ಏನೂ ಇಲ್ಲ. ಅಷ್ಟು ಮಾತ್ರವಲ್ಲ, 

ಸಿರಿಸಂಪತ್ತುಗಳೆಂದೂ ಶಾಶ್ವತವಲ್ಲ. ಸಂಪತ್ತೆಂದು ಪೋಷಿಸುವ ಈ ದೇಹ 

ಕಾಲಕ್ರಮೇಣ ಮುದಿಯಾಗುತ್ತದೆ. ರೋಗರುಜಿನಗಳಿಂದ ಕ್ಷೀಣವಾಗುತ್ತದೆ. ಮುಂದೆ 

ಒಂದು ದಿನ ಜೀವದಿಂದ ಬೇರೆಯಾಗಿ ಮಣ್ಣಾಗಿ ಹೋಗುತ್ತದೆ. 'ನನ್ನದೇ' 

ಎಂದುಕೊಂಡ ದೇಹದ ಗತಿಯೇ ಇದಾದರೆ ಮತ್ತೆ ಹೊರಗಿನ ಸಿರಿಸಂಪತ್ತು ನನ್ನದೆಂತು ಭಾವಿಸುವುದೆಂತು?

"ಇಲ್ಲಿ ಮತ್ತೊಂದು ಮಾತಿದೆ. ನೀವು ಬೇಡಿಕೆ ಮುಂದಿರಿಸಿದಿರಿ. ಆಗ ನನ್ನ 

ಎಡಗೈಯಲ್ಲಿ ಬೋಗುಣಿ ಇತ್ತು. ಶಾಸ್ತ್ರಸಮ್ಮತವಾಗಿ ನೀಡಬೇಕೆಂದು, ಒಂದು ವೇಳೆ 

ಬಲಗೈಗೆ ಬದಲಾಯಿಸಲು ಪ್ರಯತ್ನಿಸಿದ್ದರೆ, ಅಷ್ಟರಲ್ಲಿ ನನ್ನ ಮನಸ್ಸು 

ಬದಲಾಗದಿರಲು ಎನ್ನಲು ಎಂತು ಸಾಧ್ಯ? ಚಿತ್ತದ ವ್ರತ್ತಿಯೆ ಬಲು ಚಂಚಲ. ಈ ಕ್ಷಣ 

ಇದ್ದಂತೆ ಇನ್ನೊಂದು ಕ್ಷಣ ಇರುತ್ತದೆ ಎನ್ನಲಾಗಲ್ಲ. ಆಗ ನೀಡುವ ಭಾಗ್ಯದಿಂದ 

ವಂಚಿತನಾಗುತ್ತಿದ್ದೆ. ಆದುದರಿಂದ ಈ ಕ್ಷಣ ಎಡಗೈಯೊ ಬಲಗೈಯೊ, ಏನಿದೆಯೋ 

ಎಂತಿದೆಯೋ ನೀಡಬೇಕೆನಿಸಿದ ಕ್ಷಣ ಕೊಟ್ಟೆ ಬಿಡಬೇಕು ಎನಿಸಿತು" ಎಂದುತ್ತರಿಸಿದನಂತೆ.


ಮನಸ್ಸಿನ ವ್ರತ್ತಿಯನ್ನು ಇಷ್ಟು ಸರಳವಾಗಿ ವಿವರಿಸುವ, ಬದುಕಿನ ಕ್ಷಣಿಕತೆಯನ್ನೂ ಎತ್ತಿ ತೋರಿಸುವ ಈ ಕರ್ಣನ ಕಥೆ ಇಂದು ನಮ್ಮ ಸಂಕೀರ್ಣ ಬದುಕಿಗೊಂದು ಅನುಕರಣೀಯ . 


ತಿರುಪೆಯನೊಬ್ಬ ಮನೆಯಿಂದ ಹೊರಡುವಾಗ, ಪಾತ್ರೆಯಲ್ಲಿ ಘಮಘಮಿಸುವ 

ತುಪ್ಪದ ಕಡಬುಗಳನ್ನಿಟ್ಟುಕೊಂಡು ಹೊರಟನಂತೆ. ಒಂದು ಮನೆಯ ಮುಂದೆ 

ನಿಂತು, "ಅಮ್ಮಾ, ಭಿಕ್ಷೆ ಹಾಕಿ ತಾಯೀ" ಎಂದ. ಬಾಗಿಲಿನ ಹತ್ತಿರ ಬರುತ್ತಿರುವಂತೇ

 ಅವಳ ಮೂಗಿಗೆ ತುಪ್ಪದ ಪರಿಮಳ ಬಡಿಯಿತು. "ಇದು ಎಲ್ಲಿಯದೋ?" 
ಎಂದಳು ಕಡಬುಗಳನ್ನು ಕಣ್ಣರಳಿಸಿ ನೋಡುತ್ತಾ.


ತಿರುಪೆಯವನೆಂದ, "ಓ, ಆ ಮನೆಯ ಮಹಾತಾಯಿ ನೀಡಿದಳಮ್ಮಾ. ಅವರು 

ಯಾವಾಗಲೂ ಹಾಗೆ, ಕೊಡುಗೈ ದಾನಿ. ಎಂದೂ ಹಳಸಿದ್ದು, ಪಳಸಿದ್ದು 

ನೀಡಿದವರೇ ಅಲ್ಲ. ಏನಿದ್ದರೂ ಬಿಸಿಬಿಸಿ ಊಟವೇ. ಅದೂ ಒಂದು ಹೊಟ್ಟೆ 

ತುಂಬುವಷ್ಟು...." ಎಂದು ಗುಣಗಾನ ಮುಂದುವರಿಯಿತು. ಈ ಮನೆಯವಳು ಬೆನ್ನ 

ಹಿಂದೆ ಅಡಗಿಸಿಟ್ಟುಕೊಂಡ, ಹಳಸಲು ದೋಸೆಯನ್ನು ಹಾಗೆ ಮರಳಿ ಅಡುಗೆಮನೆಗೆ 

ತೆಗೆದುಕೊಂಡು ಹೋದದ್ದು, ಅಂದಿನ ಬಿಸಿಬಿಸಿ ಹೆಸರುಬೇಳೆ- ಅಕ್ಕಿಯ ಖಿಚಡಿ, 

ದೋಸೆಯ ಜಾಗದಲ್ಲಿ ಕುಳಿತದ್ದು ಎಲ್ಲವನ್ನೂ ತಿರುಪೆಯವ ಅರ್ಧ ತೆರೆದ 

ರೆಪ್ಪೆಗಳಡಿಯಲ್ಲಿ ನೋಡುತ್ತಲೇ ಇದ್ದ, ಮುಸಿಮುಸಿ ನಗುತ್ತಲೇ ಇದ್ದ. ಮನುಷ್ಯನ ಮನೋಧರ್ಮ ತಿಳಿದ ವಿಜ್ಞಾನಿ ಇವ!


ನಾವಿಂದು ಯಾವರೀತಿಯಲ್ಲಿಯೇ ಇರಲಿ. ನೀಡುವ ಕೊಡುಗೆ, ಉಪಹಾರ, 

ದಾನಗಳೆಲ್ಲವೂ ಅಹಂಕಾರ ಮೂಲದವು. ಇಲ್ಲಿ ಬಹುತೇಕವಾಗಿ "ನಾನು" 

ಕೊಡುವವ ಎಂಬ ಭಾವವೇ ಮುಖ್ಯ. "ಅವನಿಗಿಂತ" ನನ್ನದು "ಹೆಚ್ಚಿನದು" ಎಂಬ 

ಹಿನ್ನಲೆಯೇ ಪ್ರಬಲ. ದಯೆ, ಪ್ರೀತಿ, ಅನುಕಂಪಗಳಲ್ಲಿ 'ಅಹಂ' ಕುಳಿತಿರುತ್ತದೆ. ಸಹಜ

 ಗುಣಗಳನ್ನು ಬೆಳೆಯಲು ಆಸ್ಪದವಿತ್ತರೆ "ಇದು" ನೇಪಥ್ಯಕ್ಕೆ ಸರಿಯುತ್ತದೆ.



ಬದುಕು ಹೇಗಿರಬೇಕು? ತಿಮ್ಮಗುರುವೆನ್ನುತ್ತಾರೆ-

                     ನಾಸಿಕದೋಳುಚ್ಚಾಸ ನಿಶ್ವಾಸ ನಡೆವಂತೆ |


                       ಸೂಸುತ್ತಲಿರಲಿ ನಿನ್ನಿರವು ಮಂಗಳವ ||



ಉಸಿರಾಡುವುದು ಹೇಗೆ ಸಹಜಕ್ರಿಯೆಯೋ ಹಾಗೆ ನಿಮ್ಮ ಬದುಕು ಸಮಾಜಕ್ಕೆ ಮಂಗಲಮಯವಾಗಿರಬೇಕು ಎನ್ನುತ್ತಾರೆ ತಿಮ್ಮಗುರು.


"ಸರ್ವರಿಗೂ ದೀಪಾವಳಿಯ ಶುಭಾಶಯಗಳು......."

No comments:

Post a Comment

CLICK HERE